ಶಿವಮೊಗ್ಗ, ಏ.14 : ಭಾರತ ಸ್ವಾತಂತ್ರ್ಯ ಪಡೆದ ನಂತರ ಶಾಂತಿಯುತ ಹಾಗೂ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು. ಅವರು ನಮಗೆಲ್ಲ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನುಡಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಸರಳವಾಗಿ ಆಯೋಜಿಸಲಾಗಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಭಾರತದ ಮಹಾನ್ ನಾಯಕ, ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್‍ರವರು ಅಸ್ಪೃಶ್ಯತೆಯಿಂದ ಮುಕ್ತಿಯನ್ನು ನೀಡಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.  ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಓರ್ವ ಅರ್ಥಿಕ ತಜ್ಞ, ರಾಜನೀತಿಜ್ಞ ಹಾಗೂ ಆರ್‍ಬಿಐ ಸ್ಥಾಪನೆಗೆ ಕಾರಣರಾದವರು. ಶೋಷಿತ ವರ್ಗ ಮಾತ್ರವಲ್ಲ ಕಾರ್ಮಿಕರು, ಮಹಿಳೆಯರ ಹಕ್ಕು ಮತ್ತು ಕಾಯ್ದೆಗಳನ್ನು ತರುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ.
     ಯಾವುದೇ ಒಂದು ವರ್ಗಕ್ಕೆ ಅವರು ಸೀಮಿತವಾಗಿಲ್ಲ. ಅವರು ಸರ್ವಜನಾಂಗದ ನಾಯಕ. ಪ್ರತಿ ದಿನ ನಾವು ಕಚೇರಿ, ಇತರೆ ಕೆಲಸಗಳಿಗೆ ತೆರಳುವಾಗ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅಥವಾ ನೆನಪಿಸಿಕೊಂಡರೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತಾವನೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ನಾವೆಲ್ಲ ಅಂಬೇಡ್ಕರ್‍ರವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
     ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಜ್ಞಾನದ ಸಂಪತ್ತು. ಅವರು ಓದಿರುವಷ್ಟು ನಾವು ಓದಲು 100 ಜನ್ಮ ಬೇಕಾಗುತ್ತದೆ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮೌಲ್ಯಗಳನ್ನು ನಾವು ಪಾಲಿಸಬೇಕಾಗಿದೆ. ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದ ನಾವು ಈ ಸ್ಥಾನಕ್ಕೆ ಬರಲು ಸಂವಿಧಾನ ಕಾರಣ. ಯುಪಿಎಸ್‍ಸಿ, ಕೆಪಿಎಸ್‍ಸಿ ಪರೀಕ್ಷೆಗಳ ಮೂಲಕ ನಾವು ಈ ಹುದ್ದೆಗೆ ಬರಲು ಕಾರಣವಾಗಿದ್ದು ಜೀವನ ಪೂರ್ತಿ ನಾವು ಅವರನ್ನು ನೆನೆಪಿಸಿಕೊಳ್ಳುತ್ತೇವೆ.
    ಅಂಬೇಡ್ಕರ್‍ರವರು ಚರ್ಚೆ ಮತ್ತು ಚಿಂತನೆಗಳಲ್ಲಿ ನಂಬಿಕೆ ಇಟ್ಟಿದ್ದರು. ಮನುಷ್ಯರ ನಡುವೆ ಅನೇಕ ಭಿನ್ನಾಭಿಪ್ರಾಯಗಳು ಇರುತ್ತವೆ. ಈ ಭಿನ್ನಾಭಿಪ್ರಾಯಗಳನ್ನು ಚರ್ಚೆ ಮಾಡಿ, ಮಾತನಾಡಿ ಬಗೆಹರಿಸಿಕೊಳ್ಳಬಹುದು ಎಂದರು.
     ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ ಸಂವಿಧಾನವನ್ನು ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನವನ್ನು ಅಧ್ಯಯನ ಮಾಡಿ ಸದೃಢವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ಓರ್ವ ರಾಜನೀತಿಜ್ಞ, ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿದಂತೆ ದೇಶದ ಎಲ್ಲ ವರ್ಗಗಳ ಏಳ್ಗೆಗಾಗಿ ದುಡಿದವರು. ಅವರ ಕಾರಣದಿಂದು ಇಂದು ನಾನು ಐಎಎಸ್ ಪಾಸ್ ಮಾಡಿ ಅಧಿಕಾರಿಯಾಗಿದ್ದೇನೆ ಎಂದು ಸ್ಮರಿಸಿದರು.
   ಕುವೆಂಪು ವಿವಿ ಎನ್‍ಎಸ್‍ಎಸ್ ಸಂಯೋಜಕಿ ಡಾ.ಶುಭ ಮರವಂತೆ ಮಾತನಾಡಿ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‍ವರ ಕಿಡಿ ಮತ್ತು ಕುಡಿ ನಮ್ಮೆಲ್ಲರಲ್ಲಿ ಇದ್ದು ನಾವೆಲ್ಲ ಅವರ ಪ್ರತಿನಿಧಿಗಳು. ಅವರ ವ್ಯಕ್ತಿತ್ವ ಮತ್ತು ಸಾಧನೆಯ ಎರಡು ಮುಖಗಳನ್ನು ನಾವು ಕಾಣಬಹುದು.
ಅವರ ಜೀವನದ ಕುರಿತು ಪ್ರತಿಯೊಬ್ಬರು ಓದುಬೇಕು, ಮತ್ತೆ ಮತ್ತೆ ತಿಳಿದುಕೊಳ್ಳಬೇಕು.  ಏಕೆಂದರೆ ಅವರು ದೇಶದ ಬಹುತ್ವದ ನಾಯಕ. ಅವರ ಜಯಂತಿ ಆಚರಣೆಗೆ ಮಾತ್ರ ಸೀಮಿತವಲ್ಲ. ಅಂಬೇಡ್ಕರ್ ತಮ್ಮ ಬದುಕಿನ ಪೂರ್ತಿ ತನ್ನ ದೇಶ ಮತ್ತು ಜನಾಂಗಕ್ಕಾಗಿ ಬದುಕಿದವರು.
       ಸಂವಿಧಾನವನ್ನು ರಚಿಸಲು ಬೇರೆ ಬೇರೆ ದೇಶಗಳ ಸಂವಿಧಾನ ತಜ್ಞರ ಬಳಿ ಹೋದಾಗ, ಐವರು ಜೆನ್ನಿಂಗ್ ರವರು ಭಾರತದ ಸಂವಿಧಾವನ್ನು ರಚಿಸಲು ಜ್ಞಾನ ಇರುವುದು ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಮಾತ್ರ ಎಂದು ಹೇಳಿ ಕಳುಹಿಸಿರುತ್ತಾರೆ ಎಂದರು ನೆನೆದರು.  
    ಸುಧೀರ್ಘ ಅಧ್ಯಯನ ಮಾಡು ಅತ್ಯುತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದ ಕೊಡುಗೆ ಅವರಿಗೆ ಸಲ್ಲುತ್ತದೆ ಅವರ ಭೌತಿಕ ಅರಿವು, ಜ್ಞಾನ, ಸಾಧನೆಗಳು ವಿಚಾರಧಾರೆಗಳನ್ನು ಓದಿ, ತಿಳಿದುಕೊಳ್ಳುವ ಮೂಲಕ ನಮಗೆ ಮರು ಹುಟ್ಟು ಸಾಧ್ಯವಿದೆ. ಅಂಬೇಡ್ಕರ್ ಅವರ ಚಿಂತನೆಗಳು ಜೀವಂತ ಇರುವವರೆಗೆ ಸಂವಿಧಾನಕ್ಕೆ ಸಾವಿಲ್ಲ. ಸಂವಿಧಾನವೇ ನಮ್ಮೆಲ್ಲರ ಶಕ್ತಿ ಎಂದರು.
    ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.
   ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಇತರೆ ಅಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಮಹಾನಗರಪಾಲಿಕೆ ಪಾಲಿಕೆ ಆವರಣದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ರವರ 133 ನೇ ಜಯಂತಿಯ ಆಚರಣೆ ಮಾಡಲಾಯಿತು. ಈ ವೇಳೆ  ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಸ್‍ಪಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ದಲಿತ ಸಂಘಟನೆಗಳ ಮುಖಂಡರು, ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.


error: Content is protected !!