ಶಿವಮೊಗ್ಗ : ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತು ಮಾಡಿದ್ದ ಆದೇಶವನ್ನು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ವಾಪಸ್ ಪಡೆದಿದ್ದು, ಇದು ತಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಭಾಧ್ಯಕ್ಷರು ಸೇರಿದಂತೆ ಸಿಎಂ, ಡಿಸಿಎಂ ಮತ್ತು ವಿಪಕ್ಷ ನಾಯಕರ ನೇತೃತ್ವದ ಸಮಿತಿಯ ಸಲಹೆ ಯಂತೆ ಸಭಾಧ್ಯಕ್ಷರು ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದೆ. ಇದಕ್ಕಾಗಿ ತಾವು ಸಭಾಧ್ಯಕ್ಷರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ವಿಧಾನ ಮಂಡಲದ ಅಧಿವೇಶನದ ಕೊನೆ ದಿನ ಅಂದರೆ ಮಾ.21ರಂದು ಸಚಿವರೊಬ್ಬರು ಸದನದ ದಲ್ಲಿ ತಮ್ಮದೇ ಸಂಪುಟದ ಇನ್ನೊಬ್ಬ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ್ದಾಗ ನಾವು, ಆಗ ಈ ಬಗ್ಗೆ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದಾಗ, ಪೀಠಕ್ಕೆ ಅಗೌರವ ತರಲಾಗಿದೆ ಎಂದು 18 ಜನ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಈ ಆದೇಶವನ್ನು ಇಂದು ವಾಪಸ್ ಪಡೆಯಲಾಗಿದೆ. ನಾವು ಸಭಾಧ್ಯಕ್ಷರಿಗೆ ಅಗೌರವ ತಂದಿರಬಹುದು. ಆದರೆ ಹೋರಾಟ ನಡೆಸಲಾಗಿತ್ತು. ಅದಕ್ಕೆ ಜಯಸಿಕ್ಕಿದೆ ಎಂದರು.
ಸಭಾಧ್ಯಕ್ಷರಿಗೆ ನೋವಾಗಿರುವ ಬಗ್ಗೆ ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಮನವರಿಕೆ ಮಾಡಲಾಗಿತ್ತು. ರಾಜ್ಯ ಪಾಲರನ್ನೂ ಭೇಟಿ ಮಾಡಲಾಗಿತ್ತು. ರಾಜ್ಯ ಪಾಲರು ಸಲಹೆ ಕೊಟ್ಟ ಮೇಲೆ ಸಭಾಧ್ಯಕ್ಷರು ಸೇರಿದಂತೆ ಸಿಎಂ, ಡಿಸಿಎಂ ಮತ್ತು ವಿಪಕ್ಷ ನಾಯಕರ ನೇತೃತ್ವದ ಸಮಿತಿ ಯ ಮುಂದೆ ಅಮಾನತು ಆದೇಶ ವಾಪಸ್ ಪಡೆಯುವುದಾಗಿ ಸಭಾಧ್ಯಕ್ಷರು ಹೇಳಿದ್ದಾರೆ. ಆದರೆ ನಾವು ಯಾವುದಕ್ಕಾಗಿ ಧ್ವನಿ ಎತ್ತಿದ್ದೆವೋ ಆ ವಿಚಾರ ಅಲ್ಲಿಗೆ ನಿಂತಿದೆ. ಹನಿಟ್ರ್ಯಾಪ್ ಪ್ರಕರಣ ಮಾಯಾವಾಗಿಬಿಟ್ಟಿದೆ. ಅದು ನಡೆದಿತ್ತೋ, ನಡೆದಿರಲಲ್ಲವೋ ನಿಗೂಡವಾಗಿ ಉಳಿದಿದೆ ಎಂದರು.
ಪ್ರಜಾ ಪ್ರಭುತ್ವ ವ್ಯವಸ್ಥೆಗೆ ದಕ್ಕೆ ಬರುವ ಹಾಗೆ ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾರೆಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಅವತ್ತು ಹಾಗಾಗಲಿಲ್ಲ, ಒಂದು ರೀತಿ ಹನಿಟ್ರ್ಯಾಪ್ ಮಾಡುವವರಿಗೆ ಶಕ್ತಿ ಕೊಡುವ ಹಾಗೆ ಸದನದಲ್ಲಿ ಕಾಂಗ್ರೆಸ್ ನಾಯಕರು ನಡೆದುಕೊಂಡರು, ಸಭಾಧ್ಯಕ್ಷರು ಕೂಡ ಹಾಗೆ ನಡೆದುಕೊಂಡರು. ಅದನ್ನು ನಾವು ಪ್ರಶ್ನಿಸಿದ್ದೇವು. ಅದಕ್ಕಾಗಿಯೇ ನಮ್ಮನ್ನು ಅಮಾನತ್ತು ಮಾಡಲಾಗಿತ್ತು. ಈಗ ಅವರಿಗೆ ಮನವರಿಕೆ ಆದಂತಾಗಿ, ಆದೇಶ ವಾಪಾಸ್ ಪಡೆಯಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ದೀನ್ ದಯಾಳ್, ಶ್ರೀನಾಗ್, ಮಂಜುನಾಥ್ ನವುಲೆ ಇದ್ದರು.

Leave a Reply

error: Content is protected !!