ಕಡಿದಾಳ್ ಗೋಪಾಲ್

ಶಿವಮೊಗ್ಗ : ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ಪ್ರಯತ್ನದಿಂದ ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆಗೆ ಮರುಜೀವ ಬಂದಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್‍ಎಲ್ ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿಯೇ ಹೆಚ್.ಡಿ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು ನಮ್ಮ ಭಾಗ್ಯವೇ ಸರಿ. ಅವರ ಸತತ ಪ್ರಯತ್ನದಿಂದ ಕೇಂದ್ರ ಸರ್ಕಾರ ವಿಐಎಸ್‍ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಒಪ್ಪಿಗೆ ನೀಡಿದೆ. ಅಲ್ಲದೆ, ಮೊದಲ ಕಂತಾಗಿ 10 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.
ಈ ಹಣ ಸಾಕಾಗುವುದಿಲ್ಲ. ಇದಕ್ಕೆ ಮತ್ತಷ್ಟು ಹಣ ಬೇಕಾಗಿದೆ. ವಿಐಎಸ್‍ಎಲ್ ಕಾರ್ಖಾನೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಎಲ್ಲಾ ಹೊಸದಾದ ಆಧುನಿಕ ಯಂತ್ರಗಳು ಬೇಕಾಗುತ್ತದೆ. ತಂತ್ರಜ್ಞಾನ ಕೂಡ ಬದಲಾಗಬೇಕು. ಜಾಗಮಾತ್ರ ಇರುತ್ತದೆ. ಅಲ್ಲಿ ಹೊಸ ಕಾರ್ಖಾನೆಯೇ ನಿರ್ಮಾಣ ಮಾಡಬೇಕು. ಹೀಗಾಗಿ ಕಾರ್ಖಾನೆ ಹೊಸದಾಗಿ ನಿರ್ಮಾಣ ಮಾಡುವ ಎಲ್ಲಾ ಪ್ರಯತ್ನಗಳು ಈಗಾಗಲೇ ನಡೆದಿದೆ. ಸಂಸದ ಬಿ.ವೈ. ರಾಘವೇದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರುಗಳಾದ ಅಪ್ಪಾಜಿ ಗೌಡರು, ಸಂಗಮೇಶ್ ಹಾಗೂ ಕೆಲವು ಸ್ವಾಮೀಜಿಗಳು ಕೂಡ ವಿಐಎಸ್‍ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಯತ್ನಪಟ್ಟಿದ್ದಾರೆ. ಎಲ್ಲರ ಪ್ರಯತ್ನವಾಗಿ ಕೊನೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರ ಪ್ರಯತ್ನದಿಂದಾಗಿ ವಿಐಎಸ್‍ಎಲ್‍ಗೆ ಮರುಜೀವ ಬರುತ್ತಿದೆ. ಇದಕ್ಕಾಗಿ ಮೋದಿ ಹಾಗೂ ಕುಮಾರಸ್ವಾಮಿಯವರಿಗೆ ಜಿಲ್ಲಾ ಜೆಡಿಎಸ್ ಪಕ್ಷದವತಿಯಿಂದ ಅಭಿನಂದನೆಗಳು ಎಂದರು.
ಹಾಗೆಯೇ ಸಂಸದ ಬಿ.ವೈ. ರಾಘವೇಂದ್ರ ಮತ್ತು ಕೇಂದ್ರ ಸಚಿವ ಸೋಮಣ್ಣನವರ ಪ್ರಯತ್ನದಿಂದಾಗಿ ಭದ್ರಾವತಿ-ಚಿಕ್ಕಜಾಜೂರು ರೈಲ್ವೆ ಸಂಚಾರಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ. ಇದರಿಂದ ವಿಐಎಸ್‍ಎಲ್‍ಗೆ ಗಣಿತರಲು ಕೂಡ ಅನುಕೂಲವಾಗುತ್ತದೆ. ಮತ್ತು ರಾಜ್ಯಕ್ಕೆ ಸುಮಾರು 4500 ವಿದ್ಯುತ್ ಚಾಲಿತ ಬಸ್ಸುಗಳನ್ನು ಕೂಡ ಕೇಂದ್ರ ಸರ್ಕಾರ ನೀಡಿದೆ. ಇದು ಕೂಡ ಹೆಮ್ಮೆಯ ವಿಚಾರ. ಜೊತೆಗೆ ಹೆಚ್‍ಎಂಟಿ ಕಾರ್ಖಾನೆಯ ಪುನರಾರಂಭಕ್ಕೂ ಕೂಡ ಮಾತುಕತೆ ನಡೆದಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಮಳೆಗಾಲ ಆರಂಬವಾಗಿದೆ. ಚರಂಡಿಗಳೆಲ್ಲವೂ ಬ್ಲಾಕ್ ಆಗಿವೆ. ಅದನ್ನು ಸರಿಪಡಿಸಬೇಕು ಮತ್ತು ತುಂಗಾ ಆಯಿಲ್ ಮಿಲ್ ಜಾಗಕ್ಕೆ ಸೇರಿದೆ ಎನ್ನಲಾದ ನಗರದ ಬಸ್‍ಸ್ಟ್ಯಾಂಡ್ ಎದುರಿನ ಜಾಗದಲ್ಲಿ ನಗರ ಸಾರಿಗೆ ಬಸ್ಸು ನಿಲ್ದಾಣವನ್ನು ಸ್ಥಾಪಿಸಬೇಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅದರಿಂದ ರಕ್ಷಣೆ ನೀಡಬೇಕು ಮತ್ತು ಆ ಭಾಗದ ರೈತರಿಗೆ ಗನ್ ಲೈಸೆನ್ಸ್ ನೀಡಬೇಕು ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಬಡವರಿಗೆ ಅನುಕೂಲವಾಗುವಂತೆ ಶಿವಮೊಗ್ಗ ನಗರದಲ್ಲಿ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ತೆರೆಯಬೇಕು. ಆ ಮೂಲಕ ರೋಗಿಗಳಿಗೆ ಕಿಮೋಚಿಕಿತ್ಸೆ ನೀಡಲು ಅನುಕೂಲವಾಗಬೇಕು. ಈಗಾಗಲೇ 16 ಜಿಲ್ಲೆಗಳಲ್ಲಿ ಈ ರೀತಿಯ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗ ನೆನಪಾಗಿಲ್ಲ. ರಾಜಕೀಯ ಸಿಟ್ಟು ಇಟ್ಟುಕೊಳ್ಳದೆ ಕ್ಯಾನ್ಸರ್ ಚಿಕಿತ್ಸಾ ವಿಭಾಗ ತೆರೆಯಲಿ ಎಂದರು.
ಬಿಜೆಪಿ ಸದಸ್ಯರ ಅಮಾನತ್ತು ರದ್ದುಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಶಿವಮೊಗ್ಗದಲ್ಲಿ ಮಳೆಗಾಲ ಆರಂಭವಾಗಿದೆ. ಕೂಡಲೇ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ಸುಮಾರು 43 ಸ್ಥಳಗಳಲ್ಲಿ ನೀರು ನುಗ್ಗುವುದು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸತೀಶ್, ದೀಪಕ್‍ಸಿಂಗ್, ಅಬ್ದುಲ್ ವಾಜೀದ್, ಉಮಾಶಂಕರ ಉಪಾಧ್ಯಾಯ, ಸಂಜಯ್ ಕಶ್ಯಪ್, ಜಯಣ್ಣ ಗೌಡ್ರು, ನಾಗೇಶ್, ಮಹೇಶ್, ಸಂಗಯ್ಯ, ರಮೇಶ್ ನಾಯ್ಕ, ಕಾಂತರಾಜ್, ಗೋಪಿ, ರಘು ಸೇರಿದಂತೆ ಹಲವರಿದ್ದರು.

Leave a Reply

error: Content is protected !!