ಶಿವಮೊಗ್ಗ, ಏ.೨ : ಜಿಲ್ಲಾಡಳಿತ, ಜಿ.ಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಂದು ಜಿಲ್ಲಾಡಳಿತ ಕಚೇರಿ ಆವರಣದಿಂದ ಅಲ್ಲಮಪ್ರಭು ಮೈದಾನದ ವರೆಗೆ ಮತದಾನ ಜಾಗೃತಿ ಮೂಡಿಸುವ ಬೈಕ್ ರ್ಯಾಲಿ ನಡೆಯಿತು.
ಜಿ.ಪಂ.ಸಿಇಒ ಬೈಕ್ ರ್ಯಾಲಿಗೆ ಚಾಲನೆ ನೀಡಿ, ತಾವೂ ಬೈಕ್ ಚಲಾಯುಸಿಕೊಂಡು ಅಲ್ಲಮಪ್ರಭು ಮೈದಾನ ತಲುಪಿದರು.
ರ್ಯಾಲಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಮತದಾನದ ಜಾಗೃತಿ ಕುರಿತು ಘೋಷಣೆಗಳುಳ್ಳ ಪ್ಲೆಕಾರ್ಡ್ ಗಳನ್ನು ಹಿಡುದು ಘೋಷಣೆ ಕೂಗುತ್ತಾ ಸಾಗಿದರು.
” ನೋಡಿ ನಾವು ಶಿವಮೊಗ್ಗ ಜನ, ಮಾಡೇ ಮಾಡ್ತಿವಿ ಮತದಾನ” ” ಜೋಗ ನೋಡೋದು ವೈಭೋಗ ಮತದಾನ ಮಾಡೋದು ಸುಯೋಗ” ಎಂಬಿತ್ಯಾದಿ ಘೋಷಣೆಗಳೊಂದಿಗೆ ರ್ಯಾಲಿನಿರತರು ಸಾಗಿದರು. ಜಿಲ್ಲಾಡಳಿತ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯಿಂದ ಇರಿಸಲಾಗಿರುವ ಸೆಲ್ಫಿ ಕಾರ್ನರ್ ಲ್ಲಿ ಮಹಿಳೆಯರು, ರ್ಯಾಲಿಯಲ್ಲಿ ಪಾಲ್ಗೊಂಡವರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಜಿ.ಪಂ ಯೋಜನಾ ನಿರ್ದೇಶಕ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸ್ವೀಪ್ ನೋಡಲ್ ಆಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

error: Content is protected !!